Sunday, March 29, 2009

ಬೇರೆಯದೇ ಕಣ್ಣು

ಚಾರಣಗಳಲ್ಲಿ ಶಿಖರವನ್ನು ತಲುಪಿದ ನಂತರ ಶ್ರೀನಿವಾಸ ಏಕಾಂತದ ಸ್ಥಳ ಹುಡುಕಿ ಕಣ್ಮುಚ್ಚಿ ಧ್ಯಾನಮಗ್ನನಾಗುತ್ತಾನೆ. ನಾನು ಒಂದು ಕ್ಷಣವೂ ಕಣ್ಮುಚ್ಚಲು ಇಷ್ಟ ಪಡುವುದಿಲ್ಲ. ಕಣ್ಮುಚ್ಚಿದರೆ ಯಾವ ಅದ್ಭುತ ದೃಶ್ಯ ತಪ್ಪಿ ಹೋಗುವುದೋ ಎನ್ನುವ ಭಯ. ಗೆಳೆಯ ಶರತ್ ಯಾವುದೇ ಒಳ್ಳೆಯ ಸ್ಥಳಕ್ಕೆ ಹೋದರೂ ಬಹುಶಃ ತನ್ನ ಕಣ್ಣಿಗಿಂತಲೂ ಹೆಚ್ಚಾಗಿ ತನ್ನ ಕ್ಯಾಮೆರಾ ಕಣ್ಣಿನಿಂದಲೇ ನೋಡುತ್ತಾನೆನ್ನಿಸುತ್ತೆ. ಒಂದಷ್ಟು ಜನ ಅವಿವೇಕಿಗಳು ಚಾರಣಕ್ಕೆ ಬರುತ್ತಾರೆ, ಯಾವುದೇ ಶಿಖರ ತಲುಪಿದರೂ "ಇಲ್ಲಿ ರೆಸಾರ್ಟ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಹೇಳುತ್ತ "ಅಯ್ಯೋ ಕಾಲು ನೋವು, ಕೀಲು ನೋವು.." ಎಂದು ಸಂಕಟ ಪಡುತ್ತಿರುತ್ತಾರೆ.

ಅವರವರ ಮನದಂತೆ ದೃಷ್ಟಿಯೂ ಬೇರೆ
ಕವಿಯ ಕಣ್ಣಿಗೆ ಚಂದಿರ ಹೆಂಡತಿಯ ಮೋರೆ.
ಅಂಗಳದ ಕಂದನಿಗೆ ಶಶಿ ಬಾಂದಳದ ಚೆಂಡು
ವಿಜ್ಞಾನಿಗೆ ಅದು ಕೇವಲ ಕಲ್ಲು ಗುಂಡು
(ದಿನಕರ ದೇಸಾಯಿ)

ಹಿಂದೆ ನಾನೂ ಕ್ಯಾಮೆರಾ ತೆಗೆದುಕೊಂಡು ಹೋಗುತ್ತಿದ್ದೆ ಚಾರಣಗಳಿಗೆ. ಈಗ ಮೊಬೈಲಿನಲ್ಲಿ ಕ್ಯಾಮೆರಾ ಇರುವುದರಿಂದ ಬೇಕಾದಾಗ ಮಾತ್ರ ಬಳಸಬಹುದೆಂದು ಕ್ಯಾಮೆರಾ ತೆಗೆದುಕೊಂಡು ಹೋಗುವುದಿಲ್ಲ. ನನಗೇನೂ ಛಾಯಾಗ್ರಹಣದಲ್ಲಿ ಆಸಕ್ತಿಯಿಲ್ಲ. ನೋಡಿದ ದೃಶ್ಯವನ್ನು ಕಣ್ಣಿನ ಕ್ಯಾಮೆರಾದಲ್ಲಿ ತುಂಬಿಕೊಳ್ಳುವುದು, ಮನಸ್ಸಿನ ಸ್ಟುಡಿಯೋದಲ್ಲಿ ಡೆವೆಲಪ್ ಮಾಡಿಕೊಳ್ಳುವುದು ನನ್ನ ಹವ್ಯಾಸ. ಕಣ್ಣಿಗಿರುವ ಶಕ್ತಿ ಯಾವ ಮಸೂರಕ್ಕೂ ಇಲ್ಲವೆಂಬುದು ನನ್ನ ದೃಢ ನಂಬಿಕೆ.

ಮತ್ತೆ ಸಾಮಾನ್ಯವಾಗಿ ಸೂರ್ಯಾಸ್ತವಾಗಲೀ, ಸೂರ್ಯೋದಯವಾಗಲೀ, ಸಮುದ್ರದ ಅಲೆಗಳಾಗಲೀ, ಜಲಧಾರೆಗಳಾಗಲೀ, ಬೆಟ್ಟವಾಗಲೀ, ಬೆಟ್ಟದ ಮೇಲೆ ತೇಲಿ ಬರುವ ಮೋಡವಾಗಲೀ - ಅದರ ಮುಂದೆ ನಿಂತು ಪೋಸು ಕೊಟ್ಟು ಫೋಟೋ ತೆಗೆಸಿಕೊಳ್ಳುವ ಆಸಕ್ತಿಯೂ ಅಷ್ಟೇನೂ ಇಲ್ಲವಾದರೂ ಈ ಆರ್ಕುಟ್‍ನಂತಹ ತಾಣಗಳಲ್ಲಿ ಫೋಟೋ ಹಾಕಿಸಿಕೊಂಡು ಮೆರೆಯಲು ಒಮ್ಮೊಮ್ಮೆ ಅಂತಹ ಫೋಟೋ ತೆಗೆಸಿಕೊಳ್ಳ ಬೇಕೆನಿಸುತ್ತೆ. ಆದರೆ ಸೂರ್ಯನನ್ನು ಕೈಯಲ್ಲಿ ಹಿಡಿಯುವಂತೆ, ಬಾಯಲ್ಲಿ ನುಂಗುವಂತೆ, ಬೆಟ್ಟವನ್ನು ಆಶೀರ್ವದಿಸುವಂತೆ ಫೋಟೋ ಕ್ಲಿಕ್ಕಿಸಿಕೊಳ್ಳುವವರನ್ನು ನೋಡಿದಾಗ ಮುಗುಳ್ನಗು ಮೂಡುತ್ತೆ.

ಕೆಲವರು "ಮುನ್ನಾರ್‍ಗೆ ಹೋಗಿದ್ವಿ, ಕೊಡೈಕೆನಾಲ್‍ಗೆ ಹೋಗಿದ್ವಿ, ಕಬಿನಿಗೆ ಹೋಗಿದ್ವಿ, ಕುಮಾರಪರ್ವತಕ್ಕೆ ಹೋಗಿದ್ವಿ.." ಎಂದು ಹತ್ತು ಬೇರೆ ಬೇರೆ ಜಾಗಗಳ ಫೋಟೋಗಳನ್ನು ತೋರಿಸಿದಾಗಲೂ ಒಂದೇ ರೀತಿಯಿರುತ್ತೆ. ಅವರು ಎಲ್ಲ ಕಡೆ ಗುಂಪಾಗಿ ನಿಂತು ಫೋಟೋ ತೆಗೆಸಿಕೊಂಡು ಎಲ್ಲ ಫೋಟೋಗಳೂ ಒಂದೇ ಕಡೆ ತೆಗೆದಿರುವ ಹಾಗಿರುತ್ತೆ. ಮನೆಯಲ್ಲೇ ತೆಗೆದು ಬೇರೆ ಬೇರೆ ಹಿನ್ನೆಲೆಗೆ ಅಂಟಿಸುವುದು ಒಳ್ಳೆಯ ಪ್ಲ್ಯಾನು ಎಂದು ನಾನು ಟೀಕಿಸುತ್ತಿರುತ್ತೇನೆ ಇಂಥವರನ್ನು.

ನನ್ನ ಕೈಗೆ ಕ್ಯಾಮೆರಾ ಬಂದರೆ ಕೇವಲ ಅಲ್ಲಿ ಇಲ್ಲಿ ನೇತು ಹಾಕಿರುವ ಫಲಕಗಳು, ಅಲ್ಲಿರುವ ಕಾಗುಣಿತ ತಪ್ಪುಗಳು, ಅದರಿಂದಾಗುವ ಆಭಾಸಗಳು, ಕೇವಲ ಇಂಥದ್ದೇ ಕಣ್ಣಿಗೆ ಬೀಳುವುದು. ಹಕ್ಕಿಗಳ ಫೋಟೋಗಳನ್ನು ನಾನು ಇದುವರೆಗೂ ಸರಿಯಾಗಿ ತೆಗೆಯಲು ಬಂದಿಲ್ಲ ನನಗೆ. ಯಾವುದೋ ಒಂದು ಸಲ ಕಾಡೆಮ್ಮೆಯ ಗುಂಪೊಂದು ಎದುರಾದಾಗ ಅವು ಇನ್ನೇನು ಕಣ್ತಪ್ಪಿಸಿ ಹೋಗುವುದೇನೋ ಅನ್ನುವ ಹೊತ್ತಿಗೆ ಆ ಗುಂಪಿನ ಚಿತ್ರ ತೆಗೆದಿದ್ದುದುಂಟು. ಅದು ಬಿಟ್ಟರೆ ಬರೀ ನಾಯಿ, ಹಸು, ಕರು, ಬೆಟ್ಟ, ಮೋಡ - ಇವೇ. ಯಾಕೆಂದರೆ ಬೆಟ್ಟಗಳೂ ಅಚಲಗಳು. ಅವು ಕೂಡ ಯಾವ ಕೋನದಲ್ಲಿ ತೆಗೆಯಬೇಕು, ಬೆಳಕಿನ ವಿನ್ಯಾಸ ಹೇಗಿರಬೇಕು ಇವೆಲ್ಲ ತಲೆಗೆ ಹೋಗುವುದಿಲ್ಲ. ಸುಮ್ಮನೆ "view finder"ನಲ್ಲಿ ನೋಡುವುದು, ಕ್ಲಿಕ್ಕಿಸುವುದು.



ನನ್ನ ಕೆಲವರು ಗೆಳೆಯರಿದ್ದಾರೆ. ಅವರು ನೋಡುವುದು ಕ್ಯಾಮೆರಾದಿಂದಲೇ ಎಂದು ನನ್ನ ನಂಬಿಕೆ. ಗೆಳತಿ ಅದಿತಿ ಎಂಬಾಕೆಯ ಬಹುಕಾಲದ ಅಭಿಮಾನಿ ನಾನು. ಎಷ್ಟೊಂದು ಕವನಗಳಿಗೂ ಸ್ಫೂರ್ತಿ ಸಿಕ್ಕಿದೆ ಈಕೆಯ ಚಿತ್ರಗಳಿಂದ. ಪ್ರಕೃತಿಯ ಸೌಂದರ್ಯವನ್ನು ಸೆರೆಹಿಡಿಯುವುದಕ್ಕಿಂತಲೂ ಈಕೆಯ ಆಸಕ್ತಿಯು ಸುತ್ತಮುತ್ತಲ ಪರಿಸರದ ಸೌಂದರ್ಯವನ್ನು ಸೆರೆಹಿಡಿಯುವುದು.

ಚಿತ್ರಗಳಲ್ಲೇ ನವರಸವನ್ನೂ ಕಂಡು ಬೆರೆಗಾಗಿದ್ದೇನೆ. "ಸೂಪರ್" ಎಂದು ಕಮೆಂಟಿಸಲು ಬೇಸರವಾಗುತ್ತೆ, ಯಾಕೆಂದರೆ ಅದು ತೀರ ಕಡಿಮೆಯ ಹೊಗಳಿಕೆ.



ಗೆಳೆಯ ಶರತ್ ನನ್ನ ಕಾಲೇಜಿನ ಮಿತ್ರ. ಆಗ ಅವನು ಹೀಗಿರಲಿಲ್ಲ. ಕಂಪ್ಯೂಟರ್‍ನಲ್ಲಿ ಆಟವಾಡುವುದು ಇವನ ಸರ್ವಾಸಕ್ತಿಯಾಗಿತ್ತು. ಈಗ ಕ್ಯಾಮೆರಾ ಹಿಡಿದು ಕಾಡಿನೊಳಕ್ಕೆ ಹೊರಟುಬಿಡುತ್ತಾನೆ. ನನಗೆ ಯಾವುದೋ ಕಾಡಿನಲ್ಲಿ ಮರದ ಗರಿಯ ಅಂಚಿನೊಳಗೆ ಸಣ್ಣದಾಗಿ ಕಂಡ ಹಾರುವ ಅಳಿಲು, ಎದುರಾಳಿಯಂತೆ ಬಂದ ಆನೆ, ನೂರಾರು ಬಗೆಯ ಹಕ್ಕಿಗಳು, ಇಂದು ಶರತ್ ದೆಸೆಯಿಂದ ನನ್ನ ಪರದೆಯ ಮೇಲಿದೆ.

ಇವನಿಗೆ ನಾನು ಕೃತಜ್ಞ. ಈಗ ತನ್ನದೇ ವೆಬ್‍ಸೈಟನ್ನೂ ಕೂಡ ಮಾಡಿಕೊಂಡಿದ್ದಾನೆ.


ಇಬ್ಬರೂ ಹೀಗೇ ಕ್ಲಿಕ್ಕಿಸುತ್ತಿರಿಪ್ಪಾ.. ಚಿತ್ರಗಳನ್ನು ನೋಡುವ ಸೌಭಾಗ್ಯವನ್ನು ನಮಗೆ ಇನ್ನೂ ಹೆಚ್ಚು ಹೆಚ್ಚು ಒದಗಿಸಿಕೊಡಿ. ಇಬ್ಬರಿಗೂ ಆಲ್ ದಿ ಬೆಸ್ಟ್.... :-)

-ಅ
29.03.2009
11.30PM

4 comments:

agniprapancha said...

ಉತ್ತಮವಾದ ಮಾಹಿತಿ. ಪರಿಸರದ ಬಗೆಗಿನ ಕಾಳಜಿ ನಿರಂತರವಾಗಿರಲಿ... ನಿಮ್ಮವ ಅಗ್ನಿ.

sunaath said...

ನಿಮ್ಮ ಗೆಳೆಯರ ಚಿತ್ರಗಳು ಸೊಗಸಾಗಿವೆ. ಅವರಿಗೆ ಅಭಿನಂದನೆಗಳು.

PaLa said...

ಹೋ ಶರತ್ ತಮ್ಮ ಫ್ರೆಂಡಾ.. ನಂದೂ ಫ್ರೆಂಡವ್ನು

Parisarapremi said...

[ಪಾಲ] ಹೌದು, ನನ್ನ ಗೆಳೆಯ. ಹೇಗೆ ನೋಡಿ, ಪ್ರಪಂಚ ಬಹಳ ಚಿಕ್ಕದು.

[ಸುನಾಥ್] ನಿಮ್ಮ ಅಭಿನಂದನೆಗಳನ್ನು ತಲುಪಿಸಿದೆ.

[ಅಗ್ನಿ] ಧನ್ಯವಾದಗಳು.

Post a Comment

ಒಂದಷ್ಟು ಚಿತ್ರಗಳು..