Tuesday, November 04, 2008

ಕೆರೆ

ಬೆಂಗಳೂರಿನ ಕೆರೆಗಳನ್ನು ಖಾಸಗೀಕರಿಸಬೇಕೆಂಬ ಕೆಲಸಕ್ಕೆ ಸರ್ಕಾರ ಕೆಲವು ತಿಂಗಳುಗಳ ಮುಂಚೆ ಕೈ ಹಾಕಿತ್ತು. ಸರ್ಕಾರವು ಹೀಗೆ ಪೆದ್ದು ಪೆದ್ದಾಗಿ ನಡೆದುಕೊಳ್ಳುವುದು ಹೊಸತಲ್ಲವಾದರೂ ಅದನ್ನೆಲ್ಲಾ ಅಲಕ್ಷ್ಯ ಮಾಡುವಂತಿಲ್ಲ. ಖಾಸಗೀಕರಣದಿಂದ ಆಗಬಹುದಾದ ಅನಾಹುತಗಳು - ಜನರಿಗೆ ಮಾತ್ರವಲ್ಲ, ಮೀನುಗಳಿಗೆ, ಪಕ್ಷಿಗಳಿಗೆ - ಇವು ಸರ್ಕಾರಕ್ಕಂತೂ ತಿಳಿಯದ ಸಂಗತಿಯೇ.

ಬರೀ ಸರ್ಕಾರವನ್ನೇ ದೂಷಿಸಲು ಹಲವಾರು ಪತ್ರಿಕೆಗಳಿವೆ, ನನಗೆ ಅದರ ಆಸಕ್ತಿಯೂ, ಪುರುಸೊತ್ತೂ ಹೆಚ್ಚಾಗಿ ಇಲ್ಲ. ಆದರೆ ಇಲ್ಲಿ ಹೈಕೋರ್ಟಿನ ತೀರ್ಪಿಗಾಗಿ ಕೆರೆಗಳು ಕಾಯುತ್ತಿವೆ. ನಾಳೆ ನಾಡಿದ್ದರಲ್ಲಿ ಹೊರ ಬರಲಿದೆ. ಪತ್ರಿಕೆಗಳಲ್ಲಿ ಭವಿಷ್ಯ ಓದಲು ಕೆರೆಗಳು, ಕೊಕ್ಕರೆಗಳು ಕಾಯುತ್ತಿವೆ. ಮೀನುಗಳು ಕೊಕ್ಕರೆಯ ಬಾಯಿಗೆ ಸಿಕ್ಕಿ ಸಾಯಲು ಬಯಸುತ್ತವೆಯೇ ಹೊರೆತು ಯಾವುದೋ ಖಾಸಗೀ ಕಂಪೆನಿಯ ರಾಸಾಯನಿಕ ದ್ರವವನ್ನು ಸೇವಿಸಿ ಅಲ್ಲ ಎಂಬುದು ಅರ್ಥಮಾಡಿಸಲು ಕಾಯುತ್ತಿವೆ.



ಬೆಂಗಳೂರಿನ ಬೃಹತ್ ಕೆರೆಗಳನ್ನು ಈಗಾಗಲೇ ಬೇಜವಾಬ್ದಾರಿಯಿಂದ ನಾವು ಕಳೆದುಕೊಂಡಿದ್ದೇವೆ. ನಮ್ಮೂರು ಹವಾನಿಯಂತ್ರಣ ನಗರವೆಂದು ಹೆಸರುವಾಸಿಯಾಗಲು ಮೊದಲ ಕಾರಣವಿದ್ದಿದ್ದೇ ಕೆರೆಗಳದು.

ಬನಶಂಕರಿಯ ಮಾನೋಟೈಪಿನಿಂದ ಹಿಡಿದು ಇಂದಿನ ಕತ್ತರಿಗುಪ್ಪೆಯ ಫುಡ್ ವರ್ಲ್ಡ್ ವರೆಗೂ ರಾರಾಜಿಸುತ್ತಿದ್ದ ಚೆನ್ನಮ್ಮನಕೆರೆ ಈಗ "ಅಚ್ಚುಕಟ್ಟಾಗಿದೆ". ಧರ್ಮಾಂಬುಧಿ ಕೆರೆ ಮೆಜೆಸ್ಟಿಕ್ ಬಸ್‍ಸ್ಟಾಂಡ್ ಆಗಿದೆ. ಬೆಳ್ಳಂದೂರು ಕೆರೆ ಐಟಿ ಪಾರ್ಕಾಗಿದೆ. ಕೆಂಪಾಂಬುಧಿ ಕೆರೆ ಕುಲಗೆಟ್ಟ ಫ್ಯಾಂಟಸಿ ಪಾರ್ಕ್ ಆಗಿದೆ. ಹೊಸಕೋಟೆ ಕೆರೆ ಆರು ನೂರು ಎಕರೆ ಬಟ್ಟಾ ಬಯಲಾಗಿದೆ. ಹೆಬ್ಬಾಳದ ಕೆರೆ ಈಗಲೋ ಆಗಲೋ ಎಂದು ಉಸಿರಾಡುತ್ತಿದೆ. ಎಡಿಯೂರು ಕೆರೆಯಲ್ಲಿ ಅಪಾರ್ಟ್ಮೆಂಟುಗಳು ಹಡಗುಗಳಂತೆ ತೇಲಾಡುತ್ತಾ, ನೀರಿಗೆ ಕೇವಲ ಒಂದು ಬಾವಿಯಷ್ಟು ಜಾಗ ಉಳಿಸಿವೆ - ಆ ಜಾಗವೂ ಸಹ 'ಗಣೇಶ'ನೆಂಬುವನಿಂದ ಸರ್ವನಾಶವಾಗುತ್ತಿದೆ. ಸ್ಯಾಂಕಿ ಕೆರೆ ಮನೆ ಮೇಲಿನ ಸಿಂಟೆಕ್ಸ್ ಟ್ಯಾಂಕ್ ಎಂಬಂತೆ ಸ್ಯಾಂಕಿ ಟ್ಯಾಂಕ್ ಎಂದೇ ಹೆಸರು ಪಡೆದುಬಿಟ್ಟಿದೆ. ಬೆಂಗಳೂರು ಹವಾನಿಯಂತ್ರಣ ನಗರವೆಂಬ ಹೆಸರನ್ನು ಕಳೆದುಕೊಂಡು ಇನ್ನೂ ಹತ್ತುವರ್ಷವೂ ಆಗಿಲ್ಲ!

ಲಾಲ್‍ಬಾಗ್‍ - ಒಂದೇ ಅನ್ನಿಸುತ್ತೆ ಬೆಂಗಳೂರಿನ ಮರ್ಯಾದೆಯನ್ನು ಇಷ್ಟೋ ಅಷ್ಟೋ ಕಾಪಾಡುತ್ತಿರುವುದು. ಇದು ಖಾಸಗೀಕರಣದಿಂದಲ್ಲವೆಂಬುದು ಅರಿವಿದ್ದರೊಳಿತು.

LDA - Lake Department Authority of Bangalore - ಈ ಸಂಸ್ಥೆಯನ್ನೇ ಕೋರ್ಟು ನಿಷ್ಕ್ರಿಯಗೊಳಿಸುವ ಎಲ್ಲಾ ಸಾಧ್ಯತೆಗಳಿವೆ. ಕೆರೆಗಳು ಉಳಿವುದೇ? ಪಕ್ಷಿಗಳು ನಲಿವುದೇ? ನೋಡೋಣ!

-ಅ
04.11.2008
10PM

4 comments:

Vijaya said...

hope for the best!!!

Parisarapremi said...

good news... http://www.deccanherald.com/Content/Nov52008/city2008110598924.asp

Alpazna said...

"ಕೆರೆಗಳ ಖಾಸಗೀಕರಣ" ಎಂದರೇನು?
Any pointers?

Harish - ಹರೀಶ said...

ಈಗಿನ ಬೆಂಗಳೂರನ್ನು ನೋಡಿದರೆ ಇರಬೇಕೆಂದು ಖಂಡಿತ ಎನಿಸುವುದಿಲ್ಲ. ಪ್ರಾರಬ್ಧ ಕರ್ಮ!

Post a Comment

ಒಂದಷ್ಟು ಚಿತ್ರಗಳು..