"ಮುಂಬೈ. ನಿಮ್ಮದು?"
"ಮೈಸೂರು"
"ಸಧ್ಯ, ಈ ದೇಶದವರೇ ಆಗಿದ್ದೀರಲ್ಲಾ, ಆ ಪಾಕಿಸ್ತಾನದವರು ನೋಡಿ, ಎಲ್ಲಾ ಭಯೋತ್ಪಾದಕರು"
"ಅಮೇರಿಕಾದವರು ಏನೂ ಕಮ್ಮಿ ಇಲ್ಲ ಬಿಡಿ"
"ಇದ್ದಿದ್ದರಲ್ಲಿ ಆಫ್ರಿಕಾದವರೇ ವಾಸಿ, ಯಾರ ತಂಟೆಗೂ ಹೋಗಲ್ಲ, ಅವರಿಗೆ ರಷ್ಯಾದವರ ಥರ ದ್ವೇಶ ಬೇಕಿಲ್ಲ."
"ಚೈನಾದವರಿಗೆ ನಮ್ಮ ದೇಶದ ಮೇಲೆ ಏನೋ ಸಿಟ್ಟು, ಒಳಗೊಳಗೇ ಕುತಂತ್ರ ಮಾಡ್ತಾ ಇದ್ದಾರೆ.."
ಅಬ್ಬಬ್ಬಬ್ಬಬ್ಬಾ... ಎಷ್ಟೊಂದು ದ್ವೇಷ.. ಅಲ್ಲಲ್ಲ, ಎಷ್ಟೊಂದು ದೇಶ!! ಇವರ ತಲೆ ಕಂಡರೆ ಅವರಿಗಾಗಲ್ಲ, ಅವರ ತಲೆ ಕಂಡರೆ ಇವರಿಗಾಗಲ್ಲ.
ಇಲ್ಲೊಬ್ಬರನ್ನು ಪರಿಚಯ ಮಾಡ್ಕೊಡ್ತೀನಿ, ಇವರಿಗೆ ನಮ್ಮ ಹಾಗೆ ಆ ದೇಶ ಈ ದೇಶ ಅಂತ ಇಲ್ಲ. ಇವರನ್ನು ಆರ್.ಟಿ. ಅಂತ ಸಧ್ಯಕ್ಕೆ ಕರೆಯಬಹುದು. ಪೂರ್ಣ ಹೆಸರನ್ನು ಆಮೇಲೆ ಹೇಳ್ತೀನಿ.
ಇವರು ಮಳೆಗಾಲ ಬರ್ತಿದ್ ಹಾಗೇನೇ, ಮೈಸೂರಿಗೆ ಬಂದ್ಬಿಡ್ತಾರೆ. ಎಲ್ಲಿಂದ ಗೊತ್ತಾ? ಪಾಕಿಸ್ತಾನದ ಪೇಶಾವಾರದಿಂದ. ಇವರು ನಮ್ಮವರೇ ಅಲ್ಲವೇ ಅಂತ ಯಾರೋ ಕನ್ನಡಿಗರು ಚೆಕ್ಪೋಸ್ಟ್ ಅಲ್ಲಿ ಮಾತನಾಡಿಕೊಂಡರು, ಪಕ್ಕದವರು, ಉಹ್ಞುಂ, ಇವರು ಪೇಷಾವಾರದಿಂದ ಬಂದವರು, ಪ್ರತಿ ಮಳೆಗಾಲಕ್ಕೆ ಮೈಸೂರಿಗೆ ಬರ್ತಾರೆ ಅಂತ ಹೇಳಿದರು. ಆರ್.ಟಿ. ಮಾತ್ರ ಜೊಳ್ಳನೆ ನಕ್ಕು ಮೈಸೂರಿನಲ್ಲಿ ಮಾಡಿಟ್ಟಿರುವ ಮನೆಯನ್ನು ಹೊಕ್ಕ. ಮೈಸೂರಿನಲ್ಲಿ ಒಂದು ದೊಡ್ಡ ಸಂಸಾರವನ್ನೇ ಹೂಡಿದ್ದ ಆರ್.ಟಿ. ಮಳೆಗಾಲ ಮುಗೀತಿದ್ದ ಹಾಗೆ, ಗಂಟು ಮೂಟೆ ಕಟ್ಟಿಕೊಂಡು ವಾಪಸ್ ಪೇಷಾವಾರಕ್ಕೆ ಹೊರಟುಬಿಡುವುದು ಇವನ ರೂಢಿ. ಇನ್ನೊಂದು ವಿಷಯ ಗೊತ್ತಾ, ಈತನ ಬಳಿ ಪಾಸ್ಪೋರ್ಟ್ ಆಗಲೀ, ವೀಸಾ ಆಗಲೀ ಇಲ್ಲವೇ ಇಲ್ಲ. ಈತ ಪಾಕಿಸ್ತಾನಕ್ಕೂ ಪ್ರಜೆ, ಭಾರತಕ್ಕೂ ಪ್ರಜೆ. ಬಿಟ್ಟರೆ ಆಸ್ಟ್ರೇಲಿಯಾ ಪ್ರಜೆ ಬೇಕಾದರೂ ಆಗುವ ತಾಕತ್ತು ಇದೆ, ಯಾವ ಸರ್ಕಾರವೂ ಈತನ ವಿರುದ್ಧ ಮೊಕದ್ದಮೆ ಹೂಡಲಾಗುವುದಿಲ್ಲ. ಈತ ವಿಶ್ವ ಮಾನವ ಸಂದೇಶವನ್ನು ಅರೆದು ಕುಡಿದಿದ್ದಾನೆ. ಈತನ ಪೂರ್ಣ ಹೆಸರು ರಿವರ್ ಟರ್ನ್ ಅಂತ!!
ಗಡಿಗಳನ್ನು ಗೆರೆಗಳನ್ನು ಹಾಕಿಕೊಂಡವರು ನಾವೇ. ಮನುಷ್ಯರೆಂಬ ಜೀವಿಗಳು. ಆ ಗೆರೆಗಳಿಗೆ ಕಿತ್ತಾಡುವುದೂ ನಾವೇ. ನಮ್ಮ ರಾಜ್ಯ, ನಮ್ಮ ದೇಶ, ನಮ್ಮ ನೆಲ, ನಮ್ಮ ಜಲ, ನಮ್ಮ ಸಂಪನ್ಮೂಲ, ನಮ್ಮ ಚಿನ್ನ, ನಮ್ಮ ಕಬ್ಬಿಣ, ನಮ್ಮ ಗಂಧ, ನಮ್ಮ ನದಿ!!! ಇವು ನಮ್ಮದೇ? ಮನುಷ್ಯನ ದೃಷ್ಟಿಯಲ್ಲಿ ಹೌದು. ಗಂಗೆಯು ಭಾರತದ್ದು, ಎವೆರೆಸ್ಟು ಚೈನಾದು, ಸಹಾರ ಆಫ್ರಿಕಾದ್ದು, ಕಾಂಗರೂ ಆಸ್ಟ್ರೇಲಿಯಾದ್ದು. ಆದರೆ ಸೃಷ್ಟಿಯ ದೃಷ್ಟಿಯಲ್ಲಿ?

ನಮ್ಮ ಆರ್.ಟಿ.ಗೆ ಯಾವ ದೇಶವೂ ಮುಖ್ಯವಲ್ಲ. ಬದುಕು ಮುಖ್ಯ.
ಕೇರಳದ ಆನೆಗಳು ವೈನಾಡಿನಿಂದ ಕರ್ನಾಟಕಕ್ಕೆ ಸಲೀಸಾಗಿ ಬರುತ್ತವೆ. ಯಾವ ಚೆಕ್ಪೋಸ್ಟೂ ಇಲ್ಲ, ಯಾವ ಗಡಿ ವಿವಾದವೂ ಇಲ್ಲ. ಇಡೀ ಪಶ್ಚಿಮ ಘಟ್ಟವೇ ತಮ್ಮ ಮನೆ!
ಕರ್ನಾಟಕದ ಹುಲಿಯು ಯಾರ ಅಪ್ಪಣೆಯ ಅವಶ್ಯಕತೆಯೂ ಇಲ್ಲದೆ ಕೇರಳಕ್ಕೆ ಹೋಗುತ್ತೆ.
ಕೊಡಗಿನ ಕಾವೇರಿಯು ಎಷ್ಟೇ ಕಿತ್ತಾಡಿದರೂ, ಕಿರುಚಾಡಿದರೂ ತಮಿಳು ನಾಡಿನಲ್ಲೂ ಹರಿಯುತ್ತೆ. ಹರಿಯುವ ನದಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ.
ಪರಾಗಸ್ಪರ್ಶದಿಂದ ನೀಲಕುರಿಂಜಿಯು ಮುನ್ನಾರ್ ಇಂದ ಚಿಕ್ಕಮಗಳೂರಿನವರೆಗೂ ಬಂದು ಇಡೀ ಪರ್ವತ ಶ್ರೇಣಿಯನ್ನೇ ವರ್ಣರಂಜಿತವಾಗಿಸುತ್ತದೆ.
ಗಿಡಗಳಿಂದ, ಪ್ರಾಣಿ ಪಕ್ಷಿಗಳಿಂದ, ನದಿ ಕಡಲುಗಳಿಂದ ಕಲಿಯ ಬೇಕಾದ್ದು ಸಾವಿರ ಇದೆ. ಅವು ಯಾರ ಸ್ವತ್ತೂ ಅಲ್ಲ. ಗಡಿಗಾರಿಕೆಯು ಆಡಳಿತ ವರ್ಗ ಇರೋ ವರೆಗೂ ಅಷ್ಟೇ. ಬೃಹತ್ ಭೂಕಂಪ ಆದರೆ ಗಡಿಗೆರೆಯ ಜೊತೆ ಎರಡು ಕಿತ್ತಾಟದ ಭೂಮಿಯೂ ನೆಲಸಮ. ನಿಜವಾದ ಆಡಳಿತಗಾರನ ಹೆಸರು ನಿಸರ್ಗ. ಕೃತಕ ಗೆರೆಗಳನ್ನು ನೋಡಿ ನಗುತ್ತಿರುವ ಬಾಸ್!
ಆದರೂ ಮನುಷ್ಯನಿಗೂ ಬೇರೆ ಜೀವಿಗಳಿಗೂ ವ್ಯತ್ಯಾಸ ಇರಲೇ ಬೇಕಲ್ಲವೇ? ಅದಕ್ಕೆ ಮನುಷ್ಯನು ಬೇರೆಲ್ಲಾ ಜೀವಿಗಳಿಗಿಂತ ನಿಕೃಷ್ಟನೆಂದು ಸಾಬೀತು ಪಡಿಸಲು ನಿಸರ್ಗದ ಸ್ವತ್ತನ್ನು ತನ್ನದೆಂದೇ ಭಾವಿಸಿ, ಉಳಿದೆಲ್ಲ ಜೀವಿಗಳ ಪ್ರಾಣಕ್ಕೇ ಸಂಚಕಾರ ತಂದು, ತನ್ನದೇ ಸ್ಪೀಷೀಸ್ (ಮನುಷ್ಯ - ಮನುಷ್ಯ) ಜೊತೆಗೇ ಕಿತ್ತಾಟ ಮಾಡುವ ಹೀನ ಕೃತ್ಯಕ್ಕಿಂತ ಬೇರೆ ಕೆಲಸದ ಉದಾಹರಣೆ ಬೇಕೆ?
-ಅ
27.09.2007
1.40AM




