Wednesday, December 23, 2009

ಹಂದಿಗೇ ಸ್ವೈನ್ ಫ಼್ಲೂ-ನಾ?

ಇಪ್ಪತ್ತು ರೂಪಾಯಿ ನೋಟಿನ ಪ್ರಭಾವ - ಇಷ್ಟು ದಿನ ಇಲ್ಲಿ - speak-to-nature-ಗಾಗಿ ಕೆಲಸ ಮಾಡಲು ಆಗಲಿಲ್ಲ. ;-)

ಈಗ ಇಂಥದ್ದೊಂದು ಸುದ್ದಿಯೊಂದಿಗೆ ಕ್ಷಿತಿಜದೆಡೆಗಿನ ಪಯಣವನ್ನು ಪುನರಾರಂಭಿಸುತ್ತಿದ್ದೇನೆ.

ಬೇರೆ ಬೇರೆ ಪ್ರಾಣಿಗಳಿಂದ ಮನುಷ್ಯನಿಗೆ ಬರುವ ಕಾಯಿಲೆಯ ಅನುಸಾರವಾಗಿ ಆ ಕಾಯಿಲೆಗೆ ಹೆಸರನ್ನಿಡುತ್ತೇವೆ. ಕೋಳಿ ಜ್ವರ, ಹಂದಿ ಜ್ವರ, ಅಮೀಬಿಕ್ ಡೀಸೆಂಟ್ರಿ - ಹೀಗೆ. ಇವತ್ತಿನ ಪೇಪರಿನಲ್ಲಿ ಓದಿದ ಸುದ್ದಿಯು ವಿಚಿತ್ರವಾಗಿದೆ.

ಥಾಯ್ಲೆಂಡಿನಲ್ಲಿ ಮನುಷ್ಯರಿಂದ ಹಂದಿಗೆ ಹಂದಿ ಜ್ವರವು ಸಾಂಕ್ರಾಮಿಕವಾಗಿ ಹರಡಿದೆಯಂತೆ!! ವಿವರಣೆಗಳು ಇಲ್ಲಿದೆ.

ವಿಷಯ ಟೈಮ್ಸ್ ಆಫ್ ಇಂಡಿಯಾದಲ್ಲಿ ಬಂದಿರುವುದಾದ್ದರಿಂದ ನಂಬುವುದು ಬಿಡುವುದು ಓದುಗನಿಗೆ ಬಿಟ್ಟಿದ್ದು. ಆದರೆ ಮನುಷ್ಯನಿಗೆ ಸಾಧ್ಯವಾಗದೇ ಇರುವುದು ಏನೂ ಇಲ್ಲವೆಂಬುದನ್ನು ಮಾತ್ರ ಮರೆಯಬಾರದು!

-ಅ
23.12.2009
9.30AM

Wednesday, September 16, 2009

ಮೌಂಟ್ ಎವೆರೆಸ್ಟ್ ಪರ್ವತವನ್ನು ಯಾಕೆ ಹತ್ತಬೇಕು?

ಪರ್ವತಾರೋಹಿಗಳಿಗೆಲ್ಲ ಕನಸಾಗಿ, ಗುರಿಯಾಗಿ, ಪೂಜ್ಯವಾಗಿ - ಸ್ವರ್ಗಾರೋಹಣವೋ ಎಂಬ ಭಾವನೆಯನ್ನುಂಟು ಮಾಡುವ ಮೌಂಟ್ ಎವೆರೆಸ್ಟ್ ನ ಅಸ್ತಿತ್ವವೇ ಸಾಕು ಭೂಮಿಯು ಸುಂದರವೆನ್ನಲು. ಎವೆರೆಸ್ಟ್ ಹತ್ತುವವರ ಬಗ್ಗೆ ದೂರದರ್ಶನದಲ್ಲಿ ಯಾವಾಗ ಯಾವಾಗ ಬಂದರೂ ನೋಡದೆ ಇರಲು ನನ್ನಿಂದ ಆಗುವುದಿಲ್ಲ. ಅವರುಗಳ ಜಾಗದಲ್ಲಿ ನನ್ನನ್ನು ನಾನು ಕಲ್ಪಿಸಿಕೊಂಡು ನೋಡುವುದಷ್ಟೆ ಸಧ್ಯಕ್ಕೆ ನನಗಿರುವ ಸೌಭಾಗ್ಯ. ನನ್ನನ್ನು ಎಂದು ಬರಮಾಡಿಕೊಳ್ಳುತ್ತೋ ಸ್ವರ್ಗ?

ನನ್ನ ಕೆಲ ಗೆಳೆಯರು ಕೇಳಿದ್ದಾರೆ - "ಅಲ್ಲ, ನೀನು ಟ್ರೆಕ್ಕಿಂಗ್ ಎಲ್ಲ ಯಾಕೆ ಮಾಡ್ತೀಯ?" ಅಂತ. ಏನು ಹೇಳಲಿ? "ಏನಾದ್ರೂ ಮಾಡ್ಬೇಕಲ್ಲ, ಕೈಕಾಲು ಸುಮ್ಮನೆ ಇರುವುದಿಲ್ಲವಲ್ಲ, ಅದಕ್ಕೆ!" ಅಂದು ಸುಮ್ಮನಾಗುತ್ತೇನೆ. ಅನೇಕರಿಗೆ ಚಾರಣ ಮಾಡುವುದು ಎಂದರೆ "ಮಜ" ಮಾಡುವುದು ಎಂದು. "ಸುಮ್ನೆ ಟ್ರೆಕ್ಕಿಂಗ್ (ಜೊತೆಗೊಂದು ಜೋಡಿಪದ - ಗಿಕ್ಕಿಂಗ್) ಮಾಡ್ಕೊಂಡು ಟೈಮ್ ವೇಸ್ಟ್ ಮಾಡ್ತೀಯ ನೀನು" ಎಂದೂ ಹೇಳಿದ್ದಾರೆ ನನ್ನ ’ಹಿತೈಷಿ’ಗಳು. ಅವರಿಗೆ ಧನ್ಯವಾದಗಳು. "ಹಬ್ಬ ಇಲ್ಲ ಹರಿದಿನ ಇಲ್ಲ, ಹೋಗ್ಬಿಡ್ತಾನೆ ಟ್ರೆಕ್ಕಿಂಗ್‍ಗೆ, ಸ್ವಲ್ಪಾನೂ ಜವಾಬ್ದಾರಿಯಿಲ್ಲ!" ಎಂದು ’ಹಿರಿಯರು’ ಬಯ್ದಿದ್ದಾರೆ. ಅವರಿಗೂ ಧನ್ಯವಾದಗಳು.

ಇಷ್ಟಕ್ಕೂ ನಾವು ಚಾರಣಿಗರು ಚಾರಣ ಮಾಡುವುದಾದರೂ ಏಕೆ?

ಒಬ್ಬೊಬ್ಬರದೊಂದು ಕಾರಣ ಇರಬಹುದು. ಪ್ರಕೃತಿಪ್ರೇಮವೊಂದು ಮಾತ್ರ ಕಡ್ಡಾಯವಾಗಿ ಇರುವ ಎಲ್ಲ ಚಾರಣಿಗರಿಗೂ ನನ್ನದೊಂದು ನಮನ. :-)

ಮತ್ತೆ ಎವೆರೆಸ್ಟ್ ವಿಷಯಕ್ಕೆ ಬರೋಣ. ಜಾರ್ಜ್ ಮ್ಯಾಲರಿ ಎಂಬಾತ ಆಂಡ್ರ್ಯೂ ಇರ್ವಿನ್ ಎಂಬುವವನ ಜೊತೆಗೆ 1924ರಲ್ಲಿ ಎವೆರೆಸ್ಟ್ ಏರಲು ಹೊರಟು ನಾಪತ್ತೆಯಾಗಿದ್ದುದು, ಮತ್ತೆ ಎಪ್ಪತ್ತೈದು ವರ್ಷಗಳ ಅನಂತರ, ಅಂದರೆ 1999ರಲ್ಲಿ ಶಿಖರದಿಂದ ಅನತಿದೂರದಲ್ಲೇ ಅವರಿಬ್ಬರ ಶವಗಳೂ ಪತ್ತೆಯಾದುದು, ಚಾರಣಿಗರೆಲ್ಲರಿಗೂ ಗೊತ್ತಿರುವ ವಿಷಯವಷ್ಟೆ? ಅವರುಗಳು ಶಿಖರವನ್ನು ಏರಿದ್ದರೋ, ಏರುವ ಮುನ್ನವೇ ಹೋಗಿಬಿಟ್ಟರೋ ಅಥವಾ ಶಿಖರವನ್ನು ಮುಟ್ಟಿ ಕೆಳಗೆ ಇಳಿಯುವಾಗ ಹೋಗಿಬಿಟ್ಟರೋ ಇನ್ನೂ ತಿಳಿಯದ ವಿಷಯ. ಒಟ್ಟಿನಲ್ಲಿ ಎವೆರೆಸ್ಟ್ ಪರ್ವತಾರೋಹಣವನ್ನು ಪ್ರಪ್ರಥಮವಾಗಿ ಕೈಗೊಂಡ ಕೀರ್ತಿ ಇವರಿಬ್ಬರದು.



ಆತನನ್ನು ಯಾರೋ ಕೇಳಿದ್ದರಂತೆ - "ನೀವು ಎವೆರೆಸ್ಟ್ ಪರ್ವತವನ್ನು ಏಕೆ ಏರಬೇಕೆಂದಿದ್ದೀರಿ?"

ಅದಕ್ಕವರ ಥಟ್ಟನೆಯ ಉತ್ತರ - "ಯಾಕೆಂದರೆ ಅದು ಇದೆ!"

"Why do you want to climb Mt. Everest?"
"Because it's there!"

ಎವೆರೆಸ್ಟ್ ಬಗೆಗಿನ ಕೆಲವರ ಒಂದಷ್ಟು "ಹೇಳಿಕೆ"ಗಳು ಇಲ್ಲಿವೆ. http://www.mnteverest.net/quote.html.

-ಅ
16.09.2009
3.45PM

Wednesday, August 19, 2009

ಪರಾವಲಂಬಿ ಟಾಪ್ ೮

ಜಿಗಣೆ

ಜಿಗಣೆಯೆಂದ ತತ್‍ಕ್ಷಣ ನನಗೆ ನೆನಪಾಗುವುದು ಬ್ರಹ್ಮಗಿರಿ. ಶ್ರೀಕಾಂತನಂತೂ ಬ್ರಹ್ಮಗಿರಿಯ ಜಿಗಣೆಗಳ ಬಗ್ಗೆ ಹಾಡನ್ನೇ ಬರೆದುಬಿಟ್ಟಿದ್ದಾನೆ.

ಜಿಗಣೆಯೆಂದೊಡನೆಯೇ ರಕ್ತ ಹೀರುವ ಕ್ಷುದ್ರ ಜೀವಿಯ ಚಿತ್ರವು ಕಣ್ಮುಂದೆ ಬರುವಷ್ಟರ ಮಟ್ಟಿಗೆ ಜಿಗಣೆಯ ಹೆಸರನ್ನು ಬಳಸುತ್ತೇವೆ. ಯಾರಾದರೂ ಪೀಡಿಸುತ್ತಿದ್ದರೆ ಆ ವ್ಯಕ್ತಿಯನ್ನು ನಕ್ಷತ್ರಿಕನಿಗೆ ಬಿಟ್ಟರೆ ಜಿಗಣೆಗೇ ಹೋಲಿಸುವುದು. ಆದರೆ ಇಲ್ಲಿ ಗಮನಿಸಬೇಕಾದ್ದು ಒಂದು ಅಂಶವಿದೆ. ಎಲ್ಲ ಜಿಗಣೆಗಳೂ ರಕ್ತ ಹೀರುವುದಿಲ್ಲ. ರಕ್ತವನ್ನುಂಡು ಬದುಕುವ ಜಿಗಣೆಗಳು ಒಂದು ಬಗೆಯವಷ್ಟೆ. ಕೆಲವು ಜಿಗಣೆಗಳು ಸಣ್ಣ ಸಣ್ಣ ಹುಳುಗಳನ್ನು ತಿಂದು ಬದುಕುತ್ತವೆ! ನಮ್ಮ ಮಣ್ಣು ಹುಳುಗಳಿಗೆ ಹತ್ತಿರದ ಸಂಬಂಧಿ ಈ ಜಿಗಣೆ.




ಜಿಗಣೆಗಳನ್ನು ನೆನೆಸಿಕೊಂಡಾಗ ಬೀಚಿಯವರ ಈ ’ಅಂದನಾ ತಿಂಮ’ವೊಂದು ಕೂಡ ನೆನಪಾಗುತ್ತೆ - ಬ್ರಹ್ಮಗಿರಿಯ ಚಾರಣದ ಜೊತೆಗೆ.

ಹೆಂಣು ಕಂಡೊಡನೆ ಹಲ್ಲ ಕಿರಿಯುವಿ ಏಕೆ?
ಹೆಂಣೊಂದು ಹುಂಣು, ಗಂಡು ಗಂಡಾಂತರ |
ಕಂಣ ತೆರೆ ಎಲೆ ಮೂರ್ಖ! ಲಿಂಗಾತೀತವು ಆತ್ಮ
ಬಂಣ ಬಗೆಬಗೆ ಉಂಟು, ಬಿಳಿ ಒಂದೆ ತಿಂಮ ||

ಆತ್ಮ - ಲಿಂಗ - ಮಣ್ಣು ಮಸಿಯ ಬಗ್ಗೆ ಇಲ್ಲಿ ತಲೆ ಕೆಡಿಸಿಕೊಳ್ಳುವುದು ಬೇಡ. ಆದರೆ ಈ ಜಿಗಣೆಗಳು ತತ್ತ್ವಶಾಸ್ತ್ರಜ್ಞರ ಆತ್ಮದಂತೆ ಲಿಂಗಾತೀತವಲ್ಲದಿದ್ದರೂ ದೇಹದ ಪರಿಧಿಯೊಳಗೇ ಲಿಂಗಾತೀತವು. ಜಿಗಣೆಗಳು ಗಂಡೂ ಹೌದು, ಹೆಣ್ಣೂ ಹೌದು. ಕೆಲ ಕಾಲ ಗಂಡಾಗಿರುತ್ತವೆ, ಮತ್ತೆ ಕೆಲ ಕಾಲ ಹೆಣ್ಣಾಗಿರುತ್ತವೆ! ಇಂಥ ಜೀವಿಗಳಿಗೆ ಹರ್ಮಾಫ್ರೊಡೈಟ್ ಎನ್ನುತ್ತಾರೆ.

ಗಂಡಾಗಲೀ ಹೆಣ್ಣಾಗಲೀ - ಇಲ್ಲಿ ನಾವು ನೋಡುತ್ತಿರುವ ಜಿಗಣೆಗೆ ರಕ್ತ ಹೀರುವುದು ಕರ್ಮ. ಹಾಗೆ ರಕ್ತ ಹಿರಲು ಇದರ ದೇಹದ ಎರಡು ಕೊನೆಯಲ್ಲೂ ಒಂದೊಂದು ಹೀರುಕೊಳವೆ (sucker) ಇರುತ್ತೆ. ಎರಡು ಹೀರುಕೊಳವೆಗಳನ್ನೂ ಆತಿಥೇಯ ಪ್ರಾಣಿಯ ಚರ್ಮದ ಮೇಲೆ ಊರಿ, ಗೋಂದು ಹಾಕಿ ಅಂಟಿಸಿದಂತೆ ಅಂಟಿಸುತ್ತೆ. ಯಾವುದರಿಂದ ಬೇಕಾದರೂ ಹೀರಬಲ್ಲ ಸಾಮರ್ಥ್ಯ ಇದೆ. ಅಂಟಿಕೊಂಡ ನಂತರ ರಕ್ತಸ್ರಾವವು ನಿಲ್ಲದಂತೆ ಹಿಸ್ಟಮೀನ್‍ಗಳನ್ನು, ಹಿರುಡಿನ್‍ಗಳನ್ನು ಮತ್ತು Anti-coagulant ಗಳನ್ನೂ ತನ್ನ ಬಾಯಿಯಿಂದ ಹೊರಹಾಕುತ್ತೆ. ಹಾಗಾಗಿಯೇ ಜಿಗಣೆ ಕಚ್ಚಿ ಬಿಟ್ಟ ನಂತರ ಬಹಳ ಹೊತ್ತು ರಕ್ತ ಸ್ರಾವವಾಗುತ್ತಲೇ ಇರುತ್ತೆ. ರಕ್ತ ಹೀರುತ್ತ ಹೀರುತ್ತ ಜಿಗಣೆಯ ದೇಹವು ಊದುವುದನ್ನು ಕಂಡಿದ್ದೇವಷ್ಟೆ? ಚೆನ್ನಾಗಿ ಹೊಟ್ಟೆ ತುಂಬ ಹೀರಿ ಧರಮ್ ಸಿಂಗ್‍ನಂತಾಗಿ ತಾನಾಗಿ ತಾನೇ ಬಿಟ್ಟುಬಿಡುತ್ತೆ. ವಾಸ್ತವವಾಗಿ ಜಿಗಣೆ ಕಚ್ಚಿದ ನಂತರ ಎಷ್ಟೊಂದು ರಕ್ತ ಹೋದಂತೆ ಅನ್ನಿಸುತ್ತೆ, ಆದರೆ ಅದು ತಪ್ಪು. ಬಹಳ ಕಡಿಮೆ ರಕ್ತ ಹೋಗುವುದು. ಜೊತೆಗೆ, ಯಾವುದೇ ರೀತಿಯ ಕಾಯಿಲೆಗಳು ಜಿಗಣೆಯಿಂದ ಹರಡುವುದಿಲ್ಲವಾದ್ದರಿಂದ ಜಿಗಣೆಯ ಈ ರಕ್ತಹೀರುವಿಕೆಯು ಪ್ರಾಚೀನ ಔಷಧಕ್ರಮದಲ್ಲಿಯೂ ಬಳಸುತ್ತಿದ್ದರು, ಈಗಲೂ ಬಳಸುತ್ತಾರೆ.



ಕೆಲವೊಮ್ಮೆ ಅಲರ್ಜಿಯಾಗಬಹುದು - ನವೆಯುಂಟಾಗುವಂತೆ. ಅದಕ್ಕೆ ಕಾರಣ ಜಿಗಣೆಯು ಸ್ರವಿಸುವ ಹಿರುಡಿನ್. ನನಗೆ ಈ ಅಲರ್ಜಿಯಿದೆ. ಜಿಗಣೆಯ ಕಡಿತಕ್ಕೆ ಸಿಲುಕಿಕೊಂಡರೆ ಚಾರಣ ಮುಗಿಸಿಕೊಂಡು ಬಂದ ನಂತರ ಒಂದು ತಿಂಗಳು ಕೈಕಾಲು ತುರಿಸಿಕೊಳ್ಳುವುದು ನನ್ನ ಹವ್ಯಾಸ.

ಅತಿಯಾಗಿ ಮಳೆಯುಂಟಾಗುವ ಪ್ರದೇಶದಲ್ಲಿ ಮಾತ್ರ ಕಾಣಸಿಗುವುದರಿಂದ ಬೆಂಗಳೂರಿಗರು ಜಿಗಣೆಗಳನ್ನು ನೋಡಲು ಸಾಕಷ್ಟು ಪ್ರಯಾಣ ಮಾಡಬೇಕಾದೀತು. ಉಪ್ಪಿಲ್ಲದ ನೀರಿನಲ್ಲಿ, ಕೆಸರು ಪ್ರದೇಶಗಳಲ್ಲಿ - ಕಾಣಿಸುವ ಜಿಗಣೆಗಳನ್ನು ಮಾಲಿನ್ಯ ಸೂಚಕವಾಗಿಯೂ ಪರಿಗಣಿಸುತ್ತಾರೆ ಪರಿಸರತಜ್ಞರು. ಯಾವ ಕಾಡಿನಲ್ಲಿ ಜಿಗಣೆಗಳು ಹೆಚ್ಚು ಕಂಡುಬರುತ್ತದೆಯೋ ಆ ಕಾಡು ಅತ್ಯಂತ ಕಡಿಮೆ ಮಾಲಿನ್ಯಕ್ಕೊಳಗಾಗಿದೆಯೆಂದು.




ಮಳೆಯಾಗದ ಕಾಲದಲ್ಲಿ, ಬರಗಾಲದಲ್ಲಿ, ಬೇಸಿಗೆಯಲ್ಲಿ, ಜಿಗಣೆಗಳು ಅಜ್ಞಾತವಾಸಕ್ಕೆ (hibernation) ಹೊರಟು ಹೋಗುತ್ತವೆ - ಮಣ್ಣೊಳಗೆ. ತನ್ನ ದೇಹದ ತೂಕವು ಶೇ. ತೊಂಭತ್ತರಷ್ಟು ಇಳಿದರೂ ಜೀವಂತವಾಗಿರಬಲ್ಲದು. ನಂತರ, ಮತ್ತೆ ಮಳೆಯಾದಾಗ, ಮೇಲೆ ಬರುತ್ತೆ - ಯಾವುದಾದರೂ ಪ್ರಾಣಿಯು ನಡೆದಾಡುತ್ತಿದ್ದರೆ ಅದರ ಮೇಲೆ ಹತ್ತುಬಿಟ್ಟು ಹಬ್ಬದೂಟ ಮಾಡಲು. ಸೊಳ್ಳೆಗಳಂತೆಯೇ ಇವೂ ಸಹ ಉಷ್ಣವನ್ನು ಗ್ರಹಿಸಿ ಯಾವುದಾದರೂ ಪ್ರಾಣಿಯನ್ನು ಹತ್ತುವುದು. ಅಂದರೆ ನನ್ನಿಂದ ಹೊರಹೊಮ್ಮುವ ಉಷ್ಣವನ್ನು (ಇಂಗಾಲದ ಡೈ ಆಕ್ಸೈಡ್ ಸಹ ಕಾರಣ ಇದಕ್ಕೆ) ಕಂಡು ಹಿಡಿದುಕೊಂಡು ಆ ದಿಕ್ಕಿನಲ್ಲಿ ಚಲಿಸುತ್ತ ಬಂದು ನನ್ನನ್ನು ಏರುತ್ತೆ. ಹಾಗಾಗಿಯೇ ಒಂದು ವೇಳೆ ಇಬ್ಬರು ತಮ್ಮ ಕಾಲನ್ನು ಜಿಗಣೆಗೆ ತೋರಿಸಿದರೆ, ಯಾರದಾದರೂ ಒಬ್ಬರ ಮೇಲೆ ಹತ್ತುತ್ತೆ ಅಷ್ಟೆ - ಯಾರಿಂದ ಹೆಚ್ಚು ಉಷ್ಣವು ಹೊರಹೊಮ್ಮುತ್ತಿರುತ್ತೋ ಅವರ ಮೇಲೆ!

-ಅ
06.09.2009
9.30PM

Saturday, August 15, 2009

ಪರಾವಲಂಬಿ ಟಾಪ್ ೯

ಹೇನು

"ತಲೆಗೆ ತಾಕಿತೊ ತಲೆ...
ಹೇನುಗಳಿಗೆ ಸಿಕ್ಕಿತು ಹೊಸ ನೆಲೆ..." (ಹೀಗೆಂದು ದೂರದರ್ಶನದಲ್ಲಿ ಒಂದು ಜಾಹೀರಾತು ಬರುತ್ತಿತ್ತು)

ತಲೆಯಲ್ಲಿ ಮಾತ್ರವಲ್ಲ! ಕೂದಲು ಎಲ್ಲಿ ಹೆಚ್ಚು ಬೆಳೆಸಿಕೊಂಡಿರುತ್ತೇವೋ ಅಲ್ಲೆಲ್ಲ ಹೇನುಗಳು ವಾಸಿಸಬಲ್ಲುದು ಎಂಬುದನ್ನು ಅರಿತುಕೊಂಡಿರಬೇಕು. Pubic Louse ಕೂಡ ಇದೆ ಎಂಬುದನ್ನು ಅನೇಕರು ತಿಳಿದಿಲ್ಲ.

ಈಗ ಸದ್ಯಕ್ಕೆ ಮನುಷ್ಯನ ತಲೆ ಕೂದಲಿನಲ್ಲಿ ವಾಸಿಸುವ ಹೇನಿನ ಬಗ್ಗೆ ನೋಡೋಣ.



ಅಲ್ಪಾಯುಷಿಯಾದ ಹೇನುಗಳು ಒಂದು ವಾರದೊಳಕ್ಕೆ ’ವಯಸ್ಕ’ ಆಗಿಬಿಡುತ್ತೆ. ಒಂದು ತಿಂಗಳಷ್ಟೇ ಬದುಕ ಬಲ್ಲ ಹೇನು ದಿನಕ್ಕೆ ಹತ್ತರಿಂದ ಹನ್ನೆರಡು ಮೊಟ್ಟೆಯನ್ನಿಡಬಲ್ಲದು. ಸಾಮಾನ್ಯವಾಗಿ ಹೇನುಗಳ ಮೊಟೇಗೆ ಸೀರು ಅಥವಾ ಸೀರುಂಡೆ ಎಂದೂ ಕರೆಯುತ್ತೇವೆ. (ಸಿಕ್ದೋರ‍್ಗೆ ಸೀರುಂಡೆ ಎಂಬ ನುಡಿಗಟ್ಟು ಯಾರಿಗೆ ತಾನೆ ಗೊತ್ತಿಲ್ಲ!). ನಮ್ಮ ದೇಶದ ಹೆಂಗಸರು ತಲೆಯ ಮೇಲೆ ಅಧಿಕವಾಗಿ ಕೂದಲು ಬೆಳೆಸಿಕೊಳ್ಳುವ ಸಲುವಾಗಿ ಗಂಡಸರಿಗಿಂತಲೂ ಹೆಂಗಸರಲ್ಲೇ ಹೆಚ್ಚು ಕಾಣಸಿಗುವುದು. ಹೇನುಗಳಿಗೆ ಸುರಕ್ಷಿತವಾದ ವಾಸಸ್ಥಳವನ್ನು ಒದಗಿಸಿಕೊಡುವುದೇ ಕೂದಲು. ಹಾಗಾಗಿ ಕೂದಲು ಹೆಚ್ಚು ಬೆಳೆಯುವ ಪ್ರಾಣಿಗಳಲ್ಲಿ ಹೇನುಗಳು ಹೆಚ್ಚಾಗಿರುತ್ತವೆ. ಕೋತಿಗಳ ಹೇನು ಹೆಕ್ಕುವಿಕೆಯನ್ನು ನಾವೆಲ್ಲರೂ ನೋಡಿದ್ದೇವಷ್ಟೆ?



ಹೇನುಗಳಿಂದ ರೋಗಗಳೇನೂ ಬರುವುದಿಲ್ಲ, ಆದರೆ ತಲೆ ಕೆರೆತವೇ ದೊಡ್ಡ ರೋಗದಂತಿರುತ್ತೆ. ರಕ್ತ ಮಾತ್ರವನ್ನೇ ಅವಲಂಬಿಸಿ ಬದುಕುವ ಹೇನುಗಳು ಚಿಕ್ಕ ಮಕ್ಕಳಿಂದ ಹಿಡಿದು ಮುದುಕಿಯರವರೆಗೂ ತಲೆ ಕೆಡಿಸುವ, ತಲೆ ಕೆರಿಸುವ ಶತ್ರು ಹೇನು. ಸಲೀಸಾಗಿ ಗುರುತಿಸಲು ಸಾಧ್ಯವಾದರೂ ಬೇಟೆಯಾಡಲು ಸ್ವಲ್ಪ ಅಭ್ಯಾಸವು ಇರಲೇ ಬೇಕು. ಕೋತಿಗಳ ಹಾಗೆ ಹೇನನ್ನು ನಾವು ತಿನ್ನುವ ಹಾಗಿಲ್ಲವಾದ್ದರಿಂದ ಉಗುರಿನ ಮೇಲಿಟ್ಟು ಅಪ್ಪಚ್ಚಿ ಮಾಡುವುದನ್ನು ರೂಢಿಸಿಕೊಂಡಿರುತ್ತೇವೆ. ಒಳ್ಳೆಯ ತೈಲದ ಬಳಕೆ, ಸೀಗೆ ಕಾಯಿ ಪುಡಿ ಹಾಕಿಕೊಂಡು ಮಾಡುವ ಸ್ನಾನ, ಕೂದಲನ್ನು ಶುಚಿಯಾಗಿಟ್ಟುಕೊಳ್ಳುವುದು, ಶುಚಿಯಾದ ಬಾಚಣಿಗೆಯ ಬಳಕೆ - ಇವುಗಳಿಂದ ಹೇನುಗಳ ಬರುವಿಕೆಯನ್ನು ತಡೆಯಬಹುದು.

.....................................................................................

ಮುಂದಿನ ಸಲ, ನನ್ನ ಪಟ್ಟಿಯಲ್ಲಿರುವ ಟಾಪ್ ಎಂಟನ್ನು ಭೇಟಿಯಾಗೋಣ.

-ಅ
15.08.2009
11PM

Monday, August 03, 2009

ಪರಾವಲಂಬಿ ಟಾಪ್ ೧೦

'ಪರಾವಲಂಬಿ' ಎನ್ನುವ ಪದದ ವಿಸ್ತಾರವು ಹೆಚ್ಚಾಯಿತೇನೋ. ಇಂಗ್ಲೀಷಿನಲ್ಲಿ ಸುಲಭವಾಗಿ Parasites ಎನ್ನಬಹುದು. ನಮ್ಮ ಶತ್ರುಗಳು! ನಮಗೆ ಅವುಗಳ ಕಂಡರೆ ಎಷ್ಟು ದ್ವೇಷವೋ ನಮ್ಮನ್ನು ಕಂಡರೆ ಅದರ ಹತ್ತರಷ್ಟು ಪ್ರೀತಿ. ಹೇಗಿದೆ ವಿಪರ್ಯಾಸ!

ಒಂದಿಷ್ಟು ಪ್ಯಾರಾಸೈಟುಗಳ ಪರಿಚಯ ಮಾಡಿಕೊಳ್ಳೋಣ. ಹಾಗೇ ನನ್ನ ಪ್ರಕಾರದ "ಕೌಂಟ್ ಡೌನ್" ಇಲ್ಲಿದೆ.

ವಿ.ಸೂ. - ಮನುಷ್ಯನ ಮೇಲೆ ’ಅವಲಂಬಿ’ಯಾಗಿರುವ ಜೀವಿಗಳಿಗೆ ಹೆಚ್ಚು ಪ್ರಾಶಸ್ತ್ಯ ಈ ’ಕೌಂಟ್ ಡೌನ್’ನಲ್ಲಿ!

.....................................................................................

--> ಟಾಪ್ ೧೦ - ತಿಗಣೆ

ನಾನೂ ನನ್ನ ಹೆಂಡತಿಯೂ ಮಡಿಕೇರಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾಗ ರಾತ್ರಿಯಿಡೀ ಬಸ್ಸಿನಲ್ಲಿ ನಮ್ಮ ನಿದ್ದೆ ಕೆಡಿಸಿದ್ದವು. ನನಗೆ ಮಾತ್ರವೇ ಕೈ ಕಾಲು ನವೆಯೆಂದು ಭಾವಿಸಿದ್ದೆ ಮೊದಮೊದಲು. ನಂತರ ಅವಳೂ ಕೆರೆದುಕೊಳ್ಳುತ್ತಿದ್ದುದನ್ನು ನೋಡಿ, "mostly ಇಬ್ಬರಿಗೂ ಆಹಾರ ಏನೋ ಅಲರ್ಜಿ ಆಗಿರಬೇಕು" ಎಂದು ದೊಡ್ಡ ಆಲೋಪತಿ ಡಾಕ್ಟರಂತೆ ಹೇಳಿಕೆ ಕೊಟ್ಟೆ. ಮತ್ತೆ ಸ್ವಲ್ಪ ಹೊತ್ತಾದ ಮೇಲೆ ನವೆ ತಡೆಯಲು ಸಾಧ್ಯವೇ ಆಗದೇ ಇದ್ದಾಗ ಅಕ್ಕ ಪಕ್ಕ ಎಲ್ಲ ತಿರುಗಿದಾಗ ಗೊತ್ತಾಯಿತು ಇರುವವರೆಲ್ಲರೂ ಕೆರೆದುಕೊಂಡು ಆನಂದ ಅನುಭವಿಸುತ್ತಿದ್ದರು. ಅಷ್ಟರಲ್ಲಿ ರಾಜಹಂಸವು ಹುಣಸೂರಿನ ಬಳಿ "ಹತ್ ನಿಮಿಷ ಟೈಮಿದೆ ನೋಡಿ" ಎಂದು ನಿಲ್ಲಿಸಿತು. ಕೆಳಗಿಳಿದು ಬೆಳಕಿನಲ್ಲಿ ನೋಡಿಕೊಂಡರೆ ಮುಖದ ಮೇಲೆ, ಕುತ್ತಿಗೆ ಮೇಲೆ, ಕೈ ಕಾಲುಗಳಲ್ಲಿ ಗಂಧೆಗಳು! ನನ್ನ ಅಂಗಿಯ ಮೇಲೆ ಜಿರಲೆಯ ಮರಿಯಂತೆ ಕಂಡ ತಿಗಣೆಯನ್ನು ಕೈಯಲ್ಲಿ ಹಿಡಿದು ಹೊಸಕಿ ಹಾಕಿದೆ. ರಕ್ತವು ಚಿಮ್ಮಿತು. ಎಳನೀರು ಮಾರುವವನು ತಿಗಣೆಯ ಬಗ್ಗೆ ಆಮೂಲಾಗ್ರ ಮಾಹಿತಿಯನ್ನು ದಯಪಾಲಿಸಿದ. ರೇಖಾಳ ಬಟ್ಟೆಯ ಮೇಲಿದ್ದ ತಿಗಣೆಗಳ ಬೇಟೆಯನ್ನು ನಾನಾಡಿದೆ, ನನ್ನ ಅಂಗಿಯ ಮೇಲಿನ ತಿಗಣೆಗಳ ಬೇಟೆಯನ್ನು ಅವಳು ಆಡಿದಳು. ಸುಮಾರು ಹತ್ತು ತಿಗಣೆಗಳು ನನ್ನ ಅಂಗಿಯ ಮೇಲೆ ಅವಳಿಗೆ ಸಿಕ್ಕಿತು.

ನಿಶಾಚಾರಿ ಜೀವಿಯಾದ ತಿಗಣೆಯು ಸಾಮಾನ್ಯವಾಗಿ ಹಾಸಿಗೆಯನ್ನು ಬಯಸುತ್ತೆ. ರಾಜಹಂಸವನ್ನೂ ಬಯಸುತ್ತೆಂದು ನಮಗೆ ಗೊತ್ತಿರಲಿಲ್ಲ. ಸೀಮೆಯೆಣ್ಣೆಯನ್ನು ತಿಗಣೆ ಬಾರದಂತೆ ಸಿಂಪಡಿಸುತ್ತಾರೆಂದು ಕಂಡಕ್ಟರು ಹೇಳಿದ್ದ. "ದೀಪ ಹಾಕ್ಬಿಡ್ತೀವಿ, ಮೇಲೆ ಬರಲ್ಲ ತಿಗಣೆಗಳು, ಸೀಟಿನ ಒಳಗೆ ಸೇರಿಕೊಂಡು ಬಿಡುತ್ತವೆ" ಎಂದು ಕಂಡಕ್ಟರು ಹೇಳಿದರೂ ನಮಗೆ ನಮ್ಮ ಸೀಟಿಗೆ ಹೋಗಲು ಧೈರ್ಯವಾಗಲಿಲ್ಲ. ಹುಣಸೂರಿನಿಂದ ಬೆಂಗಳೂರಿನವರೆಗೂ ಡ್ರೈವರ್ ಪಕ್ಕದ ಕ್ಯಾಬಿನ್ ಸೀಟಿನಲ್ಲಿ ಕುಳಿತು ಪಯಣಿಸಿದ್ದೆವು. ತಿಗಣೆಗಳು ಕಚ್ಚಿದಾಗ ಆಗುವ ಗಂಧೆಗಳೂ ಹೆಚ್ಚೂಕಮ್ಮಿ ಜೇಡಗಳು ಕಚ್ಚುವಾಗ (ಕೆಲವು ಜೇಡಗಳು ಕಚ್ಚುತ್ತವೆ, ಮತ್ತು ಅದರಿಂದ ಅಲರ್ಜಿಯಾಗುತ್ತವೆ) ಆಗುವಂತೆಯೇ ಆಗುತ್ತೆ. ಆದರೆ ತಿಗಣೆಗಳಿಂದ ರೋಗ ಹರಡುವ ಪುರಾವೆ ಸಿಕ್ಕಿಲ್ಲ. ತಿಗಣೆ ತನ್ನ ಪಾಡಿಗೆ ಒಂದಷ್ಟು ರಕ್ತ ಕುಡಿದು ಹೋಗುತ್ತೆ. Of course, ನವೆಯುಂಟು ಮಾಡುವುದು. ಇನ್ನೂ ಹೆಚ್ಚು ತೊಂದರೆಯೆಂದರೆ ನಮ್ಮ ಮೈ ಮೇಲೆ ತಿಗಣೆಯೊಂದು ಕಂಡು ಬಂದರೇ ಸಾಕು, ಎಲ್ಲಿಲ್ಲದ ಆತಂಕ ಕಿರಿಕಿರಿ! ಆದರೆ ಬಹು ದೊಡ್ಡ ಸಮಸ್ಯೆಯೆಂದರೆ ಒಂದು ತಿಗಣೆಯು ತನ್ನ ಜೀವಮಾನದಲ್ಲಿ ಐನೂರಕ್ಕೂ ಹೆಚ್ಚು ಮೊಟ್ಟೆಯಿಡಬಲ್ಲುದು.

ಸಾಮಾನ್ಯವಾಗಿ ತಿಗಣೆಗಳು ತೇವಾಂಶವಿರುವ ಹಾಸಿಗೆಯ, ಹೊದಿಕೆಗಳ, ಬಟ್ಟೆಗಳಲ್ಲಲ್ಲದೆ ತನ್ನ ಸುತ್ತಮುತ್ತ ರಕ್ತವುಳ್ಳ ಪ್ರಾಣಿಯಿರುವ ಯಾವುದೇ ಸಂದಿಗೊಂದಿಗಳಲ್ಲಿ ಬೇಕಾದರೂ ವಾಸಿಸಬಹುದು. ಡಿ.ಡಿ.ಟಿ. ಸಿಂಪಡಿಸುವುದರಿಂದ ತಿಗಣೆಗಳು ನಾಶವಾಗುತ್ತವೆ. (ಡಿ.ಡಿ.ಟಿ.ಯು ನಿಧಾನವಾಗಿ ನಮ್ಮ ನಾಶಕ್ಕೂ ಕಾರಣವಾದೀತು).



....................................................................................

ಮುಂದಿನ ಸಲ ನನ್ನ ಪ್ರಕಾರದ ಟಾಪ್ ೯ ನ್ನು ನೋಡೋಣ.

-ಅ
03.08.2009
8.30PM

Wednesday, July 15, 2009

ಶಕ್ತಿ

ಹಿರಿಯರೊಬ್ಬರು ಸರ್. ಎಂ. ವಿ.ಯವರನ್ನು ಕೇಳಿದ್ದರಂತೆ "ನಮ್ಮ ಜೋಗದ ಸೊಬಗು ಎಷ್ಟು ಸೊಗಸಾಗಿದೆ ಅಲ್ಲವೆ, ಎಂ.ವಿ.?" ಸರ್. ಎಂ.ವಿ.ಯವರು ಜೋಗದ ಜಲಧಾರೆಯನ್ನು ಅದೇ ಮೊದಲು ನೋಡಿದ್ದು. ಅಲ್ಲಿ ಆಗ ಬೇಲಿಯಿರಲಿಲ್ಲ, ಅಣೆಕಟ್ಟಿರಲಿಲ್ಲ, ಏನೂ ಇರಲಿಲ್ಲ. ಶರಾವತಿಯು ಯಾರ ಅಡಚಣೆಯೂ ಇಲ್ಲದೆ ಬೆಟ್ಟದ ಮೇಲಿನಿಂದ ಧಾರಾಕಾರವಾಗಿ ಧುಮ್ಮಿಕ್ಕುತ್ತಿತ್ತು. ಆ ಪ್ರಶ್ನೆಯನ್ನು ಕೇಳಿಸಿಕೊಂಡ ಸರ್.ಎಂ.ವಿ.ಯವರು ಬಹಳ ಕಾಲ ಮೌನವಾಗಿದ್ದು ನಂತರ ಉತ್ತರಿಸಿದರಂತೆ, "ಎಂಥಾ ದುರಂತ, ಎಷ್ಟೊಂದು ಶಕ್ತಿ ವ್ಯರ್ಥವಾಗುತ್ತಿದೆಯಲ್ಲ!!" ಎಂದರಂತೆ!

ನಮ್ಮ ಹನುಮಂತನಗರದ ವಲಯದಲ್ಲಿ ದಿನಕ್ಕೆ ಎರಡು ಗಂಟೆಗಳ ಕಾಲ ಕರೆಂಟಿರುವುದಿಲ್ಲ. ಆದರೆ ನಮ್ಮ ಶಾಲೆಯ ವಲಯದಲ್ಲಿ ದಿನಕ್ಕೆ ಎರಡು ಗಂಟೆಗಳ ಜೊತೆಗೆ ವಾರಕ್ಕೆ ಎರಡು ದಿನ, ಸಂಪೂರ್ಣ ದಿನವೂ ಕರೆಂಟಿರುವುದಿಲ್ಲ. ಪ್ರತಿ ಬುಧವಾರ ಮತ್ತು ಪ್ರತಿ ಭಾನುವಾರ ಬೆಳಿಗ್ಗೆ ಎಂಟರಿಂದ ಸಂಜೆ ಐದರವರೆಗೆ ಪವರ್ ಕಟ್!

ಹೇಳಿ ಕೇಳಿ ನಾನು ಕಂಪ್ಯೂಟರ್ ಅಧ್ಯಾಪಕ. ಕರೆಂಟಿಲ್ಲದೆ ಏನಪ್ಪ ಗತಿ ಎಂದು ಯೋಚಿಸುತ್ತಿದ್ದಾಗ ನನ್ನ ಮೇಲಧಿಕಾರಿಯ ಸಲಹೆ, "ಅರುಣ್ ಯು,ಪಿ.ಎಸ್. ಇದ್ದರೂ ಲ್ಯಾಬನ್ನು ನೀವು ಉಪಯೋಗಿಸುವುದೇ ಇಲ್ಲವಲ್ಲ ನೀವು? ಅದು ಎರಡು ಗಂಟೆ ಬ್ಯಾಕಪ್ ಕೊಡುತ್ತೆ! ಅದಕ್ಕಾಗಿ ನಾವು ಎಷ್ಟೊಂದು ಖರ್ಚು ಮಾಡಿದ್ದೇವೆ! ಉಪಯೋಗಿಸಿಪ್ಪಾ!" ಎಂದು. ನನ್ನ ಮನಸ್ಸು ತಡೆಯದು. ಹನ್ನೆರಡು ಗಂಟೆಗಳ ಕಾಲ ಛಾರ್ಜ್ ಮಾಡಿದ ಯುಪಿಯೆಸ್ಸು ಬರೀ ಎರಡು ಗಂಟೆ ಅಷ್ಟೇ ಬ್ಯಾಕಪ್ ಕೊಡುವುದಾದರೆ ಅದು ಕೇವಲ ’ತುರ್ತು’ ಪರಿಸ್ಥಿತಿಯಲ್ಲಷ್ಟೇ ಅಲ್ಲವೆ ಬಳಸಬೇಕಾದದ್ದು? ಎಂಬುದು ನನ್ನ ವಾದ. ಅಂತಿಮವಾಗಿ ನಾನೇ ತೀರ್ಮಾನ ತೆಗೆದುಕೊಳ್ಳುವುದಾದ್ದರಿಂದ ಪ್ರತಿ ಬುಧವಾರವೂ ಬರೀ ಥಿಯರಿ ಪಾಠ ಇಟ್ಟುಕೊಳ್ಳುವ ಯೋಜನೆಯನ್ನು ಕೈಗೊಂಡಿದ್ದೇನೆ.



ಎಷ್ಟೋ ಮನೆಗಳಲ್ಲಿ ಈ ಯುಪಿಯೆಸ್ಸನ್ನು ಬಳಸಿ ಕರೆಂಟಿಲ್ಲದಿರುವಾಗ ಮನೆಯಲ್ಲಿ ದೀಪವುರಿಸುವ ಸಂಭ್ರಮದಲ್ಲಿರುವವರನ್ನು ನೋಡಿದಾಗ ಬೇಸರವಾಗುವುದಲ್ಲವೆ? ಅನೇಕರ ಮನೆಗಳಲ್ಲಿ ಎಮರ್ಜೆನ್ಸಿ ದೀಪವು ಪೂರ್ತಿ ಒಂದು ಗಂಟೆ ಉರಿಯುತ್ತಿರುತ್ತೆ. ಆ ದೀಪದಲ್ಲಿ ಮಕ್ಕಳೇನು ಓದುತ್ತಿರುವುದಿಲ್ಲ, ಹಿರಿಯರೇನು ಸಾಧನೆ ಮಾಡುತ್ತಿರುವುದಿಲ್ಲ, ಬರೀ ಹರಟೆ ಹೊಡೆಯಲೋ ಅಥವಾ ಕರೆಂಟು ಹೋದಾಗ, ಕತ್ತಲಲ್ಲಿ ಮಾಡಲು ಬೇರೆ ಕೆಲಸವಿಲ್ಲದೆ ಕುರುಕು ಮುರುಕನ್ನು ಮೆಲ್ಲಲೋ ಎಮರ್ಜೆನ್ಸಿ ಲ್ಯಾಂಪು ಬೇಕಾಗಿರುತ್ತೆ ಅನೇಕರಿಗೆ. ಮೇಣದ ಬತ್ತಿ ದೀಪವು ಹರಟೆ ಹೊಡೆಯಲು ಬೆಳಕನ್ನು ಕೊಡುವುದಿಲ್ಲವೇನೋ.

ಚಾರಣಗಳಲ್ಲಿ ಅದೆಷ್ಟು ಜನಕ್ಕೆ ಟಾರ್ಚಿನ ಮಹತ್ವವು ಗೊತ್ತಿರುವುದಿಲ್ಲವೊ! ಗೊತ್ತಿರುವುದಿಲ್ಲವೆಂದು ಹೇಳುವುದು ತಪ್ಪಾಗುತ್ತೆ. ಅದರ ಬಗ್ಗೆ ಯೋಚಿಸಿದೆ ಇರುತ್ತಾರೆ. ವಿದ್ಯಾವಂತರೇ ಪ್ಲಾಸ್ಟಿಕ್ ಕಸ ಬಿಸಾಡುವುದಿಲ್ಲವೆ ಕಾಡಿನಲ್ಲಿ? ಅವರಿಗೆ ಗೊತ್ತಿರುವುದಿಲ್ಲವೆ, ಪ್ಲಾಸ್ಟಿಕ್ಕು ಕೆಟ್ಟದ್ದು ಎಂದು? ಡಾಕ್ಟರುಗಳೇ ಸಿಗರೇಟು ಸೇದುವುದಿಲ್ಲವೆ? ಕತ್ತಲ ಕಾಡಿನಲ್ಲಿ ಟಾರ್ಚು ಎಷ್ಟು ಮುಖ್ಯವೋ ಚಂದ್ರನ ಬೆಳಕೂ ಅಷ್ಟೇ ಮುಖ್ಯ. ಆದಷ್ಟೂ ನಮ್ಮ ಕಣ್ಣುಗಳನ್ನು ಸ್ವಾಭಾವಿಕ ಬೆಳಕಿಗೆ ಒಗ್ಗಿಸಿಕೊಂಡಿರಬೇಕೆಂಬುದನ್ನು ತಿಳಿದಿರಬೇಕು. ಸ್ವಲ್ಪ ಕತ್ತಲಾದರೂ ಟಾರ್ಚನ್ನು ಆನ್ ಮಾಡುವುದು ಒಳಿತಲ್ಲ - ಎರಡು ಕಾರಣಗಳಿಂದ - ನಮ್ಮ ಕಣ್ಣುಗಳು ಟಾರ್ಚಿನ ಬೆಳಕಿಗೆ ಒಗ್ಗಲು, ಸ್ವಾಭಾವಿಕ ಬೆಳಕಿಗೆ ದೂರವಾಗುತ್ತೆ ಮತ್ತು ಟಾರ್ಚಿನ ಶಕ್ತಿಯು ’ತುರ್ತು’ ಪರಿಸ್ಥಿತಿಗೆ ಇಲ್ಲದಂತಾಗುತ್ತೆ. ಇದು ನಮಗೆ ಗೊತ್ತಿಲ್ಲವೆಂದಲ್ಲ, ಆದರೆ ನಾವು ಇದರ ಬಗ್ಗೆ ಯೋಚಿಸಿರುವುದಿಲ್ಲ, ಚಿಂತನೆ ಮಾಡಿರುವುದಿಲ್ಲ. ನನ್ನ ಮೊದಲ ಚಾರಣದಲ್ಲೇ ಶ್ರೀ ಸಿದ್ಧಲಿಂಗ ಸ್ವಾಮಿಯವರು ಮತ್ತು ಕ್ಯಾಪ್ಟನ್ ಶ್ರೀನಿವಾಸ್ ಅವರು ಟಾರ್ಚಿನ ಮಹತ್ವವನ್ನು ನಮ್ಮ ಗುಂಪಿಗೆ ತಿಳಿಸಿಕೊಟ್ಟಿದ್ದ ಸಲುವಾಗಿ ಅವರಿಗೆ ಎಷ್ಟು ನಮನ ಸಲ್ಲಿಸಿದರೂ ಸ್ವಲ್ಪವೇ.

ಸೌರಶಕ್ತಿಯನ್ನು ’ಸರಿಯಾಗಿ’ ಬಳಸುವಂತೆ ಇನ್ನೂ ಆಗಿಲ್ಲವೆಂಬುದು ಇನ್ನೊಂದು ದುರ್ದೈವ. ಸರ್.ಎಂ.ವಿ.ಯವರಿಗೆ ಜೋಗದ ಜಲಧಾರೆಯ ಶಕ್ತಿಯನ್ನು ಕಂಡೇ ಹಾಗೆ ಅನ್ನಿಸಿರುವಾಗ ಇನ್ನು ಸೌರಶಕ್ತಿಯ ಬಗ್ಗೆ ಏನನ್ನಿಸಿರಬೇಡ. ನಾನು ಸರ್.ಎಂ.ವಿ.ಯವರ ಬಗ್ಗೆ ಹೆಚ್ಚು ಓದಿಲ್ಲದ ಕಾರಣ, ಅವರು ಈ ಬಗ್ಗೆ ಏನಾದರೂ ಹೇಳಿದ್ದಾರೆಯೇ ಎಂಬುದನ್ನು ಅರಿಯೆ. ತಿಳಿದುಕೊಳ್ಳಲು ಖಂಡಿತ ಆಸಕ್ತಿಯಿದೆ. ಓದಿದ ನಂತರ ಗೊತ್ತಾಗುತ್ತೆ. ಇರಲಿ. ಅಂದು ಜೋಗದ ಜಲಧಾರೆಯ ರೂಪದಲ್ಲಿ ’ವ್ಯರ್ಥ’ವಾಗುತ್ತಿದ್ದ ಶಕ್ತಿಯು ಇಂದು ವಿದ್ಯುತ್ತಾಗಿ ಪರಿವರ್ತನೆ ಹೊಂದಿ ನಮ್ಮೆಲ್ಲರ ಮನೆಗಳಲ್ಲಿ ವ್ಯರ್ಥವಾಗುತ್ತಿದೆಯಷ್ಟೆ?

ಜೋಗದ ಜಲಧಾರೆಯಲ್ಲಿ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಯೋಜನೆ ಬಂದಾಗ ಆ ಕಾಲದ ಅನೇಕ ಪರಿಸರವಾದಿಗಳು, ಜೋಗಪ್ರೇಮಿಗಳು ಅದನ್ನು ಪ್ರತಿಭಟಿಸಿದರು. ನೊಂದುಕೊಂಡಿದ್ದರು. ಮೂಗೂರು ಮಲ್ಲಪ್ಪನವರಂತೂ ತಮ್ಮ ಪ್ರಖ್ಯಾತ ಕವನದಲ್ಲಿ (ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ) ’ತಾನು ಬಿದ್ರೇನ್ ಆದೀತೇಳು ತಾಯಿಗೆ ಬೆಳಕ!’ ಎಂದು ವ್ಯಂಗ್ಯ ರೂಪದಲ್ಲಿ ಜೋಗವನ್ನು ಹೊಗಳುತ್ತ ನೋವನ್ನು ವ್ಯಕ್ತಪಡಿಸಿದ್ದರು. ಅಂತಹ ಕಷ್ಟ ಪಟ್ಟು ನಮಗಾಗಿ ಪ್ರಕೃತಿಯು ಕೊಡುತ್ತಿರುವ ಬೆಳಕನ್ನು ವೃಥಾ ಹಾಳು ಮಾಡುವುದು ನ್ಯಾಯವಲ್ಲವೆಂಬುದನ್ನು ಕಲಿಯೋಣ. ಮಕ್ಕಳಿಗೆ ಹೇಳಿಕೊಡೋಣ. ಹಾಳು ಮಾಡುತ್ತಿರುವವರಿಗೆ ಪಾಠ ಕಲಿಸೋಣ.

"ನೀನೊಬ್ಬ ದೀಪ ಆರಿಸಿಬಿಟ್ಟರೆ ದೇಶದ ವಿದ್ಯುಚ್ಛಕ್ತಿ ಉಳಿತಾಯ ಆಗಿಬಿಡುತ್ತಾ?" ಎಂದು ಕೇಳುವವರ ಈ ಸಂಕುಚಿತ ಮನೋಭಾವನೆ ನಿರ್ನಾಮವಾಗಲೆಂದು ಹಾರೈಸುತ್ತೇನೆ.

-ಅ
15.07.2009
9.30PM

Wednesday, July 08, 2009

ಆ ಮರ - ಪು.ತಿ.ನ.

ಕೊಚ್ಚೆ ರೊಚ್ಚೆಯನು ಕೆಳಗಡೆ ಕುಡಿವೆ
ಮೇಗಡೆ ಬಾನೊಳು ಹೂ ಬಿಡುವೆ
ಅಡಿಯ ಬುಡದೊಳಗೆ ಮಲವನುಣ್ಣುವೆ
ಮೇಗಡೆ ತನಿವಣ್ಗಳ ಕೊಡುವೆ.

ಚೈತ್ರದಿ ಜಗ ಸುಡುತಿರೆ ನೆಲವೊಣಗಿ
ರಸ ಚಿಮ್ಮುವೆ ಚಿಗುರೆಲೆ ತಳೆದು
ಬೇಸಗೆ ಬಿರುಬಿಸಿಲಿಗೆ ಜಡೆಯೊಡ್ಡಿ
ತಣ್ಣನೆ ನೆಳಲನು ಕೆಳಗೊಗೆವೆ.

ಚಳಿಗಾಲದಿ ಮಂಜಿಗೆ ಮೈ ತೆರೆಯುತ
ಬೆತ್ತಲೆ ನಿಲ್ಲುವೆ ಎಲೆ ಕೊಡವಿ
ಆಷಾಢದ ಬಿರುಗಾಳಿ ಪಿಶಾಚಿಗೊ
ಎಲೆಯನೊಂದನೂ ಕೈಬಿಡೆನು.

ಮಲಿನೆಯಲ್ಲ ನಾ ಅಶುಚಿಯೂ ಅಲ್ಲ
ನನಗೆಂದೇ ನಾ ಬದುಕಿಲ್ಲ
ನನ್ನಿಂದಲಿ ಕೆಡಕಾರಿಗೂ ಇಲ್ಲ
ಯಾರುಪಕಾರವು ನನಗಿಲ್ಲ.

ಬೇಕಾದಗೆ ಬೇಕಾದುದನೀವೆ
ಕೊಡುಕೊಡುತ್ತಲೇ ನಾ ಸಾವೆ
ಸತ್ತರು ನಾರದ ಸುಗಂಧಿ ನಾನು
ಸತ್ತರೆ ನಾರುವ ಹೆಣ ನೀನು.



-ಅ
08.07.2009
9PM

ಒಂದಷ್ಟು ಚಿತ್ರಗಳು..